ಗುರುವಾರ, ಅಕ್ಟೋಬರ್ 11, 2018

ಗುರುತು

ಗುರುತು

ನೀನು ಬ್ರಾಹ್ಮಣನೋ ಇಲ್ಲ ಶೂದ್ರನೋ?
ಕೇಳಿದರು ಸಮಾಜವಾದಿಗಳು.
ನೀನು ಆಸ್ತಿಕನೋ ಇಲ್ಲ ನಾಸ್ತಿಕನೋ?
ಕೇಳಿದರು ಧರ್ಮಶಾಸ್ತ್ರಜ್ಞರು.
ನೀನು ರಾಷ್ಟ್ರವಾದಿಯೋ ಇಲ್ಲ ನಕ್ಸಲನೋ?
ಕೇಳಿದರು ರಾಜ್ಯಶಾಸ್ತ್ರಜ್ಞರು.
ನೀನು ಸ್ವದೇಶಿಯೋ ಇಲ್ಲ ವಿದೇಶಿಯೋ?
ಕೇಳಿದರು ದೇಶಪ್ರೇಮಿಗಳು.
ಹುಟ್ಟು ಸಾವಿನ ನಡುವೆ
ನಾ ಹೊತ್ತ ಹಲವು ಗುರುತಗಳ ನಡುವೆ,
ನೀನೂ ಮನುಷ್ಯನೇ ಅಲ್ಲವೇ?
ಎಂದವರ ಕಾಣೆನಲ್ಲ.

-ವಿಶ್ವನಾಥ್

ಬುಧವಾರ, ಏಪ್ರಿಲ್ 4, 2018

ಪ್ರೀತಿಯೊಂದೇ ದಾರಿ



ಮುಗುಳುನಗೆ ಮೀರಿ ಬರಲಿ
ಸವಿ ಮಾತುಗಳಿನಿತು ಹೊರಗೆ.
ಬಿಗು ಮನವ ಮೀರಿ ಅರಳಲಿ
ಪ್ರೀತಿ ಹೂ ಮೆಲ್ಲಗೆ.

ತೀರದಲ್ಲಿ ನಿಂತು ಬಿಡಲಿ
ಕಳವಳಗಳ ದೋಣಿ.
ನಿನ್ನಷ್ಟೇ ಅರಿವು ನನಗೆ
ನಾನೂ ಒಬ್ಬ ಪಯಣಿ.

ತಿಳುವಳಿಕೆಯ ನಗರದಲ್ಲಿ
ಪ್ರೀತಿಯೊಂದೇ ದಾರಿ.
ನನಗೂ ನಿನಗೂ ಬೇಕಿರುವುದಷ್ಟೇ
ಜೀವನದಲ್ಲೊಂದು ಬಾರಿ.

-ವಿಶ್ವನಾಥ್