ಬುಧವಾರ, ಜುಲೈ 11, 2012

ಬೇಲಿ

ಚಂದದರಮನೆ ಕಟ್ಟಿ
ಬಿಂಕದರಸಿಯನಿರಿಸಿ
ರತ್ನಗಂಬಳಿ ಹೊದ್ದು
ಮಲಗಿದ್ದು ಸಾಕು.

ಬದುಕಿನಲಿ ಮಾಡಿರುವೆ
ಸಾಕಷ್ಟು ನಿದ್ದೆ,
ಸ್ವಪ್ನದಲೂ ಏಕಯ್ಯ
ನಿದ್ದೆಯಲಿ ಬಿದ್ದೆ?

ಹೇಗೆ ಆದೀತು ನನಸು
ಅಂಥ ಬಾಳ್ವೆಯ ಕನಸು,
ಸುತ್ತ ಕಟ್ಟಿಕೊಂಡು ನೀ
ಬೇಲಿಗಳ ಸಾಕಷ್ಟು.

ಎಂದೋ ಒಮ್ಮೆ ಎದ್ದು
ನಾಯಿನರಿಯೋ ನೋಡದೆ
ತಿಜೋರಿಯ ಕೀಲಿ ಕೈ ಕೊಟ್ಟು
ಬೀಳುವುದೇಕೋ ಮತ್ತದೇ ನಿದ್ದೆಗೆ?

ಹೇಗೆ ನಿಂತೀತು ಅರಮನೆ
ಸಿಗುವಳೇಕೆ ಯಾವ ಅರಸಿ,
ರತ್ನಗಳ ಬಿಡು ನೀ
ನೂಲಾದರೂ ಸಿಕ್ಕೀತೆ?

ತರವೇ ನಿನ್ನಯ ಮೌನ
ಹೇಳು ಭಾರತೀಯನೆ
ಸುಳ್ಳು ಕತ್ತಲೆ ಸರಿಸಿ
ಬರುವುದೇ ನಿನ್ನಯ ದನಿ?

ಬೇಲಿಗಳ ಕಿತ್ತೊಗೆದು
ಕಂದಕಗಳ ಹಾರಿ
ನರಿಗಳ ಬೇಟೆಯಾಡಲು
ಬರುವುದೇನು ನಿನ್ನ ದನಿ?

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ