ಬುಧವಾರ, ಜುಲೈ 11, 2012

ಭೂಮಿತಾಯಿ

ಅವಳನ್ನು ಇಂಚಿಂಚು ಬಿಡದಂತೆ
ನಿಧಾನವಾಗಿ ಮಾರಾಟಮಾಡತೊಡಗಿದ್ದಾಯಿತು.
ಅವಳನ್ನು ಮನಸ್ಸಿಗಿಚ್ಛೆ ಬಂದಂತೆ
ದುಡಿಸಿಕೊಂಡದ್ದಾಯಿತು.

ಆದರೂ ಅವಳು ಸಿಟ್ಟಿಗೆದ್ದಿಲ್ಲ.
ಅವಳ ಮೈ ಚರ್ಮದಲ್ಲರ್ಧ ಕಿತ್ತಿದ್ದಾಗಿದೆ;
ಅವಳ ನೆತ್ತಿ ಪಾದಗಳ ಕೆಳಗೆ ಬೆಂಕಿಯಿಟ್ಟಿದ್ದಾಗಿದೆ;
ಆದರೂ ಅವಳು ಆಗೊಮ್ಮೆ ಈಗೊಮ್ಮೆ
ರೋಧಿಸಿದ್ದು ಬಿಟ್ಟರೆ ಮತ್ತೇನೂ ಅಂದಿಲ್ಲ.

ಅವಳ ಸೀರೆಗೆ ಬೆಂಕಿ ಹತ್ತುವವರೆಗೂ;
ಆ ಬೆಂಕಿ ಎಲ್ಲರನ್ನೂ ನುಂಗಿಕೊಳ್ಳಲಿದೆ
ಎಂದು ತಿಳಿಯುವವರೆಗೂ;
ಆಕೆಯನ್ನು ದುಡಿಸಿಕೊಂಡ್ಡದ್ದಾಯಿತು.
ಆದರೂ ಅವಳು ಸುಮ್ಮನಿದ್ದಳು.
ಹೊಟ್ಟೆಯೊಳಗಿನ ಜ್ವಾಲಾಮುಖಿ
ತಣ್ಣಗಾದೀತು ಇಂದಾದರೂ ಎಂದು.

ಆದರೆ ಇನ್ನು ಆಕೆ ಸಹಿಸಲೊಲ್ಲಳು,
ಹರಿಶ್ಚಂದ್ರನ ಚಂದ್ರಮತಿಯಂತಿರುವುದ ನಿಲ್ಲಿಸಿದ್ದಾಳೆ.
ಹತ್ತಿರುವ ಆಕೆಯ ಒಡಲಿನ ಬೆಂಕಿಗೆ
ತಣ್ಣೀರು ಎರೆಯದಿದ್ದರೆ, ಆಸ್ಫೋಟಿಸದಿರಳು ಆಕೆ.
ಪ್ರತಿಕ್ಷಣವೂ ಬೆಂಕಿ ಉತ್ಪಾದಿಸುತ್ತಿರುವ ನಮಗೆ
ತಿಳಿದೀತೆ ಆಕೆಯ ಒಡಲಿನ ಬೆಂಕಿ ಆರಿಸುವ ನೀರೆಲ್ಲಿದೆಯೆಂದು?

ವಿಶ್ವನಾಥ್.ಡಿ.ಎ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ