ಬುಧವಾರ, ಜುಲೈ 11, 2012

ತಿಂಮನ ಬೆಂಗ್ಳೂರ್ ಸವಾ(ಫಾ)ರಿ

ತಿಂಮ ಬಂದ ಬೆಂಗ್ಳೂರ್‍ಗೆ
ಕನಸನ್ತುಂಬ್ಕೊಂಡ್ ಕಣ್ಣೊಳ್ಗೆ
ಎಂದೂ ಕಾಣದ್ ಕೆಂಪೇಗೌಡರ್‍
ಕನಸಿನ್ ಊರನ್ ಕಾಣೋಕೆ.
ಕೆ ಎಸ್ ಆರ್ ಟಿ ಸಿ ಬಸ್ಸನ್ನಿಳಿದು
ಬಟ್ಟೆಗಂಟನ್ಹೊತ್ಕಂಡ್ನಡೆದು
ನಡ್ದು ನಡ್ದು ಸುಸ್ತಾಗೋದ್ರೊಳ್ಗೆ
ಕಡೆಗೂ ಬಂದ ಮೆಜೆಸ್ಟಿಕ್ ಒಳಗೆ.
ದಾರಿ ಕಾಣದ್ ನಮ್ಮ ತಿಂಮ
ಹಿಡಿದ ಸುಮ್ನೆ ನಿಂತೋನನ್ನ
ಕೇಳ್ದ ’ಇದಾನಸೋದ ನೋಡೋಕ್
ಎಲ್ಲೀಗ್ ಹೋಗ್ಬೇಕಂತೇಳಣ್ಣಾ’.
’ಕೊಡು ಹತ್ರುಪಾಯ್
ಹೇಳ್ತೀನ್ ದಾರಿ
ಏನ್ಬೇಕ್ ಕೇಳು
ಹೇಳ್ತೀನ್ ತೋರಿ’.
’ದಾರಿ ತೋರ್‍ಸಾಕ್ ಹತ್ರುಪಾಯಿ
ಸುಮ್ಕೆ ಯಾಕೆ ಕೊಡ್ಬೇಕೇಳಿ?
ಏನೂ ಅರೀದವ್ನಲ್ಲೀ ತಿಂಮ
ಎಲ್ಲಾ ತಿಳಿದ ಭಾರೀ ಬೊಮ್ಮ’.
ಸರೀ ಹೇಗೋ ಹುಡ್ಕಿ ನಡ್ದೀ
ವಿಧಾನಸೌಧ ಕಡ್ಗೂ ತಲ್ಪಿ
ನೋಡ್ತಾ ಬಿಟ್ಟ್ಕಣ್ ಹಾಗೇ ಬಿಟ್ಟಿ
ಮರೆತೇ ಬಿಟ್ಟ ತಂದಿದ್ ರೊಟ್ಟಿ.
ಹೊಟ್ಟೆ ಹಸ್ದಾಗ್ ಎಚ್ಚರ್‍ಗೊಂಡು
ಪಕ್ದಲ್ನೋಡ್ತಾನ್ ಮೈತಡವ್ಕೊಂಡು
ಇಲ್ಲವೇ ಇಲ್ಲ ಬಟ್ಟೆ ಗಂಟು
ತಿಂಮಿ ಮಾಡ್ಕೊಟ್ ರೊಟ್ಟಿ ಗಂಟು.
ಹಸಿದ ಹೊಟ್ಟೆ ಹೊತ್ಕಂಡ್ ತಿಂಮ
ನಡೆದಾ ಕಬ್ಬನ್ ಪಾರ್ಕಿನ್ ತುಂಬಾ
ಏನೂ ತಿನ್ನಾಕ್ ಸಿಗದೆ ಕಡ್ಗೆ
ತಿಂದ ಹಳೇ ಕಳ್ಳೇಪುರಿಯನ್ನ.
ಇಷ್ಟಕ್ ಸುಸ್ತಾಗದ್ ನಮ್ ತಿಂಮ
ಹೊರಟ ಸುತ್ತೋಕ್ ಬ್ರಿಗೇಡ್ ರೋಡನ್ನ
’ನಾಚಿಕೆ ಮಾನ ಏನೂ ಇಲ್ಲಾ
ಚಡ್ಡಿ ಹಾಕ್ಕೊಂಡ್ ನಡೀತಾರಲ್ಲಾ?’
’ಇವರ್‍ಗಳ್ಗಿಂತ ನಾನೇ ವಾಸಿ
ಲುಂಗಿನಾರಾ ಉಟ್ಕಂಡಿವ್ನಿ
ಕನ್ನಡ ಯಾರೂ ಮಾತಾಡಲ್ಲ
ಕನ್ನಡಿಗ್ರಾದ್ರೂ ಇಂಗ್ಲೀಷೇ ಎಲ್ಲಾ’.
ಇಂದಿನ ಬೆಂಗ್ಳೂರ್ ಕಂಡು ತಿಂಮ
ನೆನೆಯುತ ಕೆಂಪೇಗೌಡರನ್ನ
ಹತ್ತಿದ ತನ್ನೂರ್‍ಗ್ ಹೋಗೋ ಬಸ್ನ
ಜೇಬ್ನಾಗ್ ಹುಡುಕ್ತ ಕಳ್ದೋದ್ ಪರ್ಸ್ನ.
ವಿಶ್ವನಾಥ್ ಡಿ ಎ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ